ಬೆಂಗಳೂರು: ಮಾದಿಗ ಯುವ ಸಮೂಹದ ವತಿಯಿಂದ ಭಾನುವಾರ ಶಾಸಕರ ಭವನದಲ್ಲಿ ನೆಡೆದ ಸಭೆಯಲ್ಲಿ, ಸಮುದಾಯದ ಹಕ್ಕುಗಳು, ಒಳಮೀಸಲಾತಿ ಹಾಗೂ ಉದ್ಯೋಗದ ಪ್ರಶ್ನೆಗಳ ಕುರಿತು ತೀವ್ರ ಚರ್ಚೆ ನಡೆಸಿ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಮಾದಿಗ ಯುವ ಜನತೇ ಸಂಘಟನೆ ಸಂಯೋಜಕರಾದ ಎಸ್. ಸಂಗಮೇಶ್ ಅವರ ನೇತೃತ್ವದಲ್ಲಿ ನೆಡೆದ ಸಭೆಯಲ್ಲಿ ಯುವ ಮುಖಂಡರುಗಳಾದ ಕೆ. ಎನ್ ನಾಗೇಶ್, ಹನುಮೇಶ ಗುಂಡೂರ, ಡಾ.ರವಿ ಮರಡಿಪುರ, ಏಳೋಕೊಟ್ಟೆಪ್ಪ ಪಾಟೀಲ್, ನಿಂಗರಾಜ ಗುಳೆ, ಮಂಜುನಾಥ ಬಿ, ಭೀಮಾಶಂಕರ ಬಿಲ್ಲವ ಸೇರಿದಂತೆ ಹತ್ತಾರು ಮುಖಂಡರು ಪಾಲ್ಗೊಂಡು ಒಳಮೀಸಲಾತಿ ಕುರಿತು ಚರ್ಚಿಸಿದರು.
ಒಳಮೀಸಲಾತಿಯ ನೆಪದಲ್ಲಿ ಎರಡುವರೆ ಲಕ್ಷ ಹುದ್ದೆಗಳ ನೇಮಕಾತಿ ವಿಳಂಬವಾಗಿರುವುದು ಸರ್ಕಾರದ ಸ್ಪಷ್ಟ ಲೋಪವಾಗಿದೆ. ಈ ಹಿನ್ನೆಲೆ, ಒಳಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಮಾರ್ಚ್ 27 ರಂದು ನೆಡೆಯುವ ಸಚಿವ ಸಂಪುಟ ಸಭೆಯಲ್ಲಿ, ನಾಗಮೋಹನ್ ದಾಸ್ ವರದಿ ಶಿಫಾರಸ್ಸಿನಂತೆ ಮಾದಿಗ ಸಮುದಾಯಕ್ಕೆ ಕಡ್ಡಾಯವಾಗಿ 6% ಒಳಮೀಸಲಾತಿ ನೀಡಬೇಕು. ಜೊತೆಗೆ 56,342 ಹುದ್ದೆಗಳನ್ನು ಭರ್ತಿ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಮೂಲಕ ಒತ್ತಾಯಿಸಲಾಯಿತು.
ಪ್ರವರ್ಗ ಎ ಯಲ್ಲಿ ಇರುವ ಮಾದಿಗ ಸಮುದಾಯದ ಹಕ್ಕುಗಳಿಗೆ ಯಾವುದೇ ಚ್ಯುತಿ ಉಂಟಾಗದಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಸರ್ಕಾರ ಒಳಮೀಸಲಾತಿ ಕುರಿತು ಯಾವುದೇ ನಿರ್ಣಯ ಕೈಗೊಳ್ಳದೆ ವಿಳಂಬ ಮಾಡಿದಲ್ಲಿ, ಮಾದಿಗ ಹಾಗೂ ಸಂಬಂಧಿತ ಜಾತಿಗಳ ಯುವ ಹೋರಾಟಗಾರರ ಒಕ್ಕೂಟದಿಂದ ರಾಜ್ಯದಾದ್ಯಂತ ಕಾನೂನು ಭಂಗ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು. ಈ ಹೋರಾಟವು ಕಠಿಣ ಸ್ವರೂಪದ್ದಾಗಿರುತ್ತದೆ. ಒಳಮೀಸಲಾತಿ ಜಾರಿಗೊಳಿಸದಿದ್ದಲ್ಲಿ, ರಾಜ್ಯದಾದ್ಯಂತ ಇರುವ ಪೌರಕಾರ್ಮಿಕರು ತಮ್ಮ ಕೆಲಸ ತೊರೆದು ಉಗ್ರ ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಯಿತು.
ಮಾರ್ಚ್ 27 ರಂದು ನಡೆಯುವ ಪಾದಯಾತ್ರೆಯಲ್ಲಿ ಆಗಮಿಸುತ್ತಿರುವ ಪರಮ ಪೂಜ್ಯ ಶ್ರೀ ಶ್ರೀ ಷಡಕ್ಷರಿಮುನಿ ಸ್ವಾಮಿಗಳ ನೇತೃತ್ವದಲ್ಲಿ, ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಒಟ್ಟಿನಲ್ಲಿ ಒಳಮೀಸಲಾತಿ ನಮ್ಮ ಹಕ್ಕು— ಅದು ತಕ್ಷಣ ಜಾರಿಯಾಗಬೇಕು. ಸರ್ಕಾರ ವಿಳಂಬ ಮಾಡಿದರೆ, ರಾಜ್ಯದಾದ್ಯಂತ ಹೋರಾಟ ಅನಿವಾರ್ಯವಾಗುತ್ತದೆ ಎನ್ನುವ ಒಕ್ಕೂರಲಿನ ಘೋಷಣೆ ಮೊಳಗಿತು.















