ಬೆಂಗಳೂರು: ಜೆಡಿಎಸ್ ಕಾರ್ಯಕರ್ತರು ಜಿಬಿಎ ಚುನಾವಣೆಯ ಸಂಬಂಧದ ಈಗಿನಿಂದಲೇ ತಯಾರಿ ಆರಂಭಿಸಬೇಕು, ಮೈತ್ರಿಯ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯತ್ತ ಮುಖ ಮಾಡಬೇಕು ಎಂದು ಜೆಡಿಎಸ್ ಪಕ್ಷದ ಜಿಬಿಎ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಕರೆ ನೀಡಿದರು.
ಭಾನುವಾರ ಸಂಜೆ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಚೇರಿಯಲ್ಲಿ ಕ್ಷೇತ್ರದ ವಿವಿಧ ಘಟಕಗಳ ಅಧ್ಯಕ್ಷರುಗಳಿಗೆ ಹಾಗೂ ಕೆಲವು ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತಗಟ್ಟೆ ಹಾಗೂ ವಾರ್ಡ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಚುರುಕು ಮಾಡಬೇಕು. ಸಕ್ರಿಯ ಕಾರ್ಯಕರ್ತರನ್ನು ಮುನ್ನೆಲೆಗೆ ತರಬೇಕು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪದಾಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಒಮ್ಮತ, ಒಗ್ಗಟಿನಲ್ಲಿ ಬಲವಿದೆ ಎನ್ನುವುದನ್ನು ಮರೆಯಬಾರದು. ಬೆಂಗಳೂರು ನಗರದ ಅಭಿವೃದ್ಧಿಗೆ ದೇವೇಗೌಡರು, ಕುಮಾರಸ್ವಾಮಿ ಅವರ ಕೊಡುಗೆ ಬಹಳಷ್ಟಿದೆ. ಜನತೆಗೆ ಈ ಎಲ್ಲಾ ಮಾಹಿತಿ ಕೊಡಬೇಕು. ಪಕ್ಷದ ಸಾಧನೆಗಳನ್ನು ವಿನಮ್ರವಾಗಿ ಜನತೆಯ ಗಮನಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ 12 ವಾರ್ಡಗಳ ಪುರುಷ ಮತ್ತು ಮಹಿಳಾ ಅಧ್ಯಕ್ಷರುಗಳಿಗೆ ಮತ್ತು ಕ್ಷೇತ್ರ ಮಟ್ಟದ ವಿವಿಧ ಘಟಕಗಳ ಅಧ್ಯಕ್ಷರುಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಬೆಂಗಳೂರು ನಗರ ಪಶ್ಚಿಮ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ.ತಿಮ್ಮೇಗೌಡ, ಜಿಬಿಎ ಬೆಂಗಳೂರು ಜೆಡಿಎಸ್ ಮಹಿಳಾ ಅಧ್ಯಕ್ಷೆ ಶೈಲ ಸಂತೋಜಿರಾವ್, ಅಧ್ಯಕ್ಷರು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಕೆ. ಎನ್. ದಯಾನಂದ ಮೂರ್ತಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ ಸಿ ರಾಜಣ್ಣ, ರಾಜ್ಯ ವಕ್ತಾರ ದೇವರಾಜ್, ಜೆಡಿಎಸ್ ಹಿರಿಯ ಮುಖಂಡರಾದ ನಾರಾಯಣ ಸ್ವಾಮಿ, ವೀರೇಶ್ ಕುಮಾರ್, ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಚಂದ್ರೆಗೌಡ್ರು, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ ಗಂಗಾ ರಾಮ್ ಸೇರಿದಂತೆ ಹಲವು ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.















