ಬೆಂಗಳೂರು: ನವೆಂಬರ್ 1 ರಂದು 1956 ರಲ್ಲಿ ಕರ್ನಾಟಕ ಏಕೀಕರಣವಾಯಿತು. ಅದಕ್ಕೂ ಮೊದಲು ಆಂಧ್ರಪ್ರದೇಶ ದೇಶದ ಮೊದಲ ಭಾಷಾವಾರು ರಾಜ್ಯವಾಗಿ ಹೊರಹೊಮ್ಮಿತು. ಆದರೆ ಅದಕ್ಕೂ ಮೊದಲೇ ನಮ್ಮಲ್ಲಿ ಏಕೀಕರಣದ ಕಿಡಿ ಹೊತ್ತಿತ್ತು ಎಂದು ಹೆಸರಾಂತ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
ಶುಕ್ರವಾರ ಇಳಿ ಸಂಜೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತಾಡಿದ ಅವರು, ಸಾಕಷ್ಟು ಹೋರಾಟಗಳ ನಂತರ ಮೈಸೂರು ಪ್ರಾಂತ್ಯ ಕರ್ನಾಟಕ ಎಂದು ನಾಮಕರಣಗೊಂಡಿತು. ಭಾಷಾವಾರು ಪ್ರಾಂತ್ಯವಾಗಿ ಬೇರೆಯಾದರೂ ಸಂವಿಧಾನಕ್ಕೆ ಅನುಸಾರವಾಗಿ ಒಕ್ಕೂಟ ವ್ಯವಸ್ಥೆಯ ಬೇರೆ ಭಾಷೆಗಳಿಗೆ ಕೂಡ ನಮ್ಮ ನಾಡಿನಲ್ಲಿ ಜಾಗವನ್ನು ಕೊಟ್ಟು ನಿಜವಾದ ಸಮಾನ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಎಲ್ಲ ಜಾತಿ ಧರ್ಮವನ್ನು ಬದಿಗೊತ್ತಿ ಕರ್ನಾಟಕ ಮತ್ತು ಕನ್ನಡವನ್ನು ಏಕೋಕರಣಗೊಂಡ ಸಂದರ್ಭದಿಂದ ಕಟ್ಟಿ ಬೆಳೆಸಿದ್ದೇವೆ ಎಂದು ಪ್ರತಿಪಾದಿಸಿದರು.
ಕಾಲ್ಪನಿಕ ಶತ್ರುಗಳಿಂದ ಕನ್ನಡ ಭಾಷೆ ಹಾಳಾಗಲು ಸಾಧ್ಯವಿಲ್ಲ. ಅನ್ಯ ಭಾಷಿಕ ಪದಗಳ ಹೊರತು ಕನ್ನಡ ಭಾಷೆ ಇಷ್ಟು ಬೆಳೆಯಲು ಸಾಧ್ಯವಿರಲಿಲ್ಲ. ಸಾಕಷ್ಟು ಕನ್ನಡ ಭಾಷೆ ಸಂಸ್ಕೃತ, ಇಂಗ್ಲಿಷ್, ಉರ್ದು ಹೀಗೆ ಹಲವು ಭಾಷಾ ಪದಗಳ ಸಮ್ಮಿಲನವಾಗಿದೆ. ಜನಸಾಮಾನ್ಯರು ವಿಶಾಲಹೃದಯದಿಂದ ಅನುಕೂಲಕರ ಪದಗಳನ್ನು ಬೇರೆ ಭಾಷೆಗಳನ್ನು ಬೆರೆಸಿ ಬಳಸಿರುವುದೇ ಕನ್ನಡ ಭಾಷೆ ಇಷ್ಟು ಬೆಳೆಯಲು ಸಾಧ್ಯವಾಗಿದೆ. ಆದ್ದರಿಂದ ದೂರುವುದನ್ನು ಬಿಟ್ಟು ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸುವುದರ ಕಡೆ ಮಾತ್ರ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ಇಡೀ ಭಾರತದಲ್ಲಿ ನಾಡ ಭಾಷೆಯಲ್ಲಿ ಶಿಕ್ಷಣವನ್ನು ಪೂರೈಸಿದವರಿಗೆ ಮೀಸಲಾತಿಯನ್ನು ಕೊಟ್ಟಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಸಾಕಷ್ಟು ಜನರು ಕನ್ನಡ ಭಾಷೆ ನಾಶವಾಗುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸುತ್ತಿರುತ್ತಾರೆ ಆದರೆ ವಸಾಹತು ವ್ಯವಸ್ಥೆ, ಪರಭಾಷಿಕರ ದಾಳಿಗಳನ್ನು ಮೆಟ್ಟಿ ನಿಂತು ಎಲ್ಲರನ್ನೂ ಎಲ್ಲವನ್ನೂ ಸ್ವೀಕರಿಸಿ ಇಂದು ನಮ್ಮ ಭಾಷೆ ಜಗತ್ತಿನ ಪ್ರಮುಖ ಭಾಷೆಯಾಗಿ ಹೊರಹೊಮ್ಮಿದೆ ಎಂದು ಬರಗೂರು ರಾಮಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು.














