ಬೆಂಗಳೂರು: ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ದಿ ರಿಯಲ್ ಪ್ರಜಾಕೀಯ ಆಪ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಚುನಾವಣಾ ರಾಜಕೀಯಕ್ಕೆ ಧುಮುಖಲು ಮತ್ತೆ ಸಿದ್ಧರಾಗಿರುವ ಸೂಚನೆಯನ್ನು ನೀಡಿದರು.
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಜೊತೆ ಜೊತೆಗೆ ಪ್ರಜಾಕೀಯ ಎಂಬ ಪಕ್ಷವನ್ನು ವರ್ಷಗಳ ಹಿಂದೆ ಹುಟ್ಟುಹಾಕಿದ್ದರು. ಈ ಹಿನ್ನಲೆಯಲ್ಲಿ ಸೈಲೆಂಟ್ ಆಗಿದ್ದ ಅವರ ಪ್ರಜಾಕೀಯ ಈಗ ಮತ್ತೆ ಆಕ್ಟೀವ್ ಆದಂತಿದೆ. ಇದರ ಅಂಗವಾಗಿ ಪ್ರಜಾಕೀಯ ಆನ್ಲೈನ್ ಆಪ್ ಬಿಡುಗಡೆ ಮಾಡಿದರು. ಜನ ಹೇಗೆ ತಮ್ಮ ಆಳುವ ನಾಯಕನನ್ನು ಆಯ್ಕೆ ಮಾಡಬೇಕು, ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು, ಹೇಗೆ ಆಯ್ಕೆ ಮಾಡಬೇಕು, ಪ್ರಜಾಕೀಯ ಟಿಕೆಟ್ ಬೇಕಾದವರು ಹೇಗೆ ಆಪ್ ಬಳಸಿ ಟಿಕೆಟ್ ಪಡೆಯಬಹುದು ಎಂಬುದರ ಬಗ್ಗೆ ಉಪೇಂದ್ರ ಖುದ್ದಾಗಿ ಮಾಹಿತಿ ನೀಡಿದರು.
ಜಿಬಿಎ ಮತ್ತು 2028ರ ವಿಧಾನಸಭೆಗೆ ಚುನಾವಣೆಗೂ ಮುನ್ನ ಪ್ರಜಾಕೀಯದಲ್ಲಿ ಹೊಸ ಸಿಸ್ಟಮ್ ಜಾರಿಗೆ ತರಲಾಗಿದೆ. ಹೊಸ ಆ್ಯಪ್ ಮೂಲಕ ಆಡಳಿತ ಬದಲಾವಣೆಗೆ ಉಪೇಂದ್ರ ಹೆಜ್ಜೆ ಇಡಲಾಗಿದೆ. ಜನರು ಹಾಗೂ ಪ್ರಜಾಕೀಯ ಮಧ್ಯೆ ನೇರ ಸಂಪರ್ಕಕ್ಕಾಗಿ ಜನರೊಂದಿಗೆ ನಿರಂತರ ಸಂಪರ್ಕದ ಕಾರ್ಯಕ್ಕೆ ಮುಂದುಡಿ ಇಡಲಾಗಿದೆ.
ಪ್ರಜಾಕೀಯ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ನಟ ಉಪೇಂದ್ರ, ಈಗಿನ ಕಾಲದಲ್ಲಿ ನೇರವಾಗಿ ಮಾತನಾಡಿದರೆ ಲೆಪ್ಟ್ ರೈಟ್ ಎನ್ನಲು ಶುರುಮಾಡ್ತಾರೆ. ಅದಕ್ಕೆ ನಾನು ಲೆಪ್ಟ್, ರೈಟ್ ಎಲ್ಲಾ ಬಿಟ್ಟು ಸ್ಟ್ರೈಟ್ ಆಗಿ ಇರುತ್ತೇನೆ. ಜೀವನದಲ್ಲಿ ಡಿಪೆಂಡೆಂಟ್ ಆಗಿ ಇರಬಾರದು. ಇಂಡಿಪೆಂಡೆಂಟ್ ಆಗಿ ಇರಬೇಕ. ನಾವು ಆದಷ್ಟು ಡಿಪೆಂಡೆನ್ಸಿ ಕಡಿಮೆ ಮಾಡಿಕೊಂಡರೆ ಒಳ್ಳೆಯದು. ನಾನು ಇಂಡಿಪೆಂಡೆಂಟ್ ಆಗಿ ಡಿಫರೆಂಟ್ ಆಗಿ ಪ್ಲಾನ್ ಮಾಡಿದ್ದೇನೆ. ನಾನು ಪ್ರಜಾಕೀಯ ಶುರು ಮಾಡಿದಾಗ ಸಾಕಷ್ಟು ಸಮಸ್ಯೆ ಎದುರಿಸಿದೆ ಎಂದರು.
ಹೊಸ ಆ್ಯಪ್ ನಲ್ಲಿ ಒಬ್ಬ ವೋಟರ್ ಆಗಿ ಯೋಚನೆ ಮಾಡಿದ್ದೇನೆ. ಟಿಕೆಟ್ ಕೊಡೋಕೆ ಜನರ ಹತ್ತಿರ ಸೈನ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ್ದೆ, ಆದರೆ ಅದೆಲ್ಲ ಬಿಟ್ಟು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇನೆ. ನಾನು ಇನ್ನೊಬ್ಬರ ರೊಟೀನ್ ಮೇಲೆ ಡಿಪೆಂಡ್ ಆಗಿಲ್ಲ. ಬೇಡಿಕೆಗಳ ಈಡೇರಿಕೆಗಳನ್ನು ನೆರವೇರಿಸಲು ನಮಗೆ ನಾಯಕ ಬೇಡ ಕಾರ್ಮಿಕ ಬೇಕಾಗಿದೆ. ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎನ್ನುವವರು ಮಾತ್ರ ನಮ್ಮ ಪಾರ್ಟಿ ಒಳಗೆ ಬರಬೇಕು ಎನ್ನುವುದು ಕೂಡ ಈ ಆ್ಯಪ್ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಸದ್ಯಕ್ಕೆ ಜಿಬಿಎ ಎಲೆಕ್ಷನ್ ಬಗ್ಗೆ ಮಾಡೆಲ್ ರೆಡಿ ಮಾಡಿಕೊಂಡಿದ್ದೇವೆ. ವಾರ್ಡ್ ವಾರು, ಏರಿಯಾದ ಪ್ರತಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು, ಅದಕ್ಕೆ ಪರಿಹಾರ ಕೂಡ ಚಾರ್ಟ್ ಮೂಲಕವೇ ತಿಳಿಸಿದ್ದೀವಿ. ಕೆಲಸ ಹೇಗೆ ಮಾಡಬೇಕು ಎನ್ನುವುದನ್ನು ಸ್ಪರ್ಧಿಗಳಿಗೆ ಹೇಳಿ ಸೈನ್ ಮಾಡಿಸುತ್ತಿದ್ದೇವೆ. ಜನರ ಸಮಸ್ಯೆ ಕ್ಲೀಯರ್ ಮಾಡಲಿಕ್ಕೆ ಎನ್ನುವುದು ಇದರಲ್ಲಿ ಗೊತ್ತಾಗುತ್ತದೆ. ಇನ್ನು ಇಲ್ಲಿರುವ ಚಾರ್ಟ್ ಲ್ಲಿ ಜನರ ಅಭಿಪ್ರಾಯ ತಿಳಿಸಲು ಅವಕಾಶ ಕೊಟ್ಟಿರುತ್ತೇವೆ. ಜನ ಅತೀ ಹೆಚ್ಚು ಯಾವುದು ಸರಿ ಎನ್ನುತ್ತಾರೋ ಅದಕ್ಕೆ ಪ್ರಾಮುಖ್ಯತೆ ಕೊಡಲಿದ್ದೇವೆ. ಇಲ್ಲಿ ಜನರ ತೀರ್ಮಾನವೇ ಅಂತಿಮವಾಗಿದೆ ಎಂದು ಹೇಳಿದರು.
ಕೆಲಸ ಮಾಡಿಲ್ಲ ಎಂದರೆ ಜನರೇ ಸ್ಪರ್ಧಿಯನ್ನು ಕೆಳಗಿಳಿಸಲು ಅವಕಾಶ ಈ ಸಿಸ್ಟಮ್ ನಲ್ಲಿ ಇದೆ. ಒಪ್ಪಿ ಒಳ ಬಂದಿರವವರು, ಫೇಸ್ ಬುಕ್ ಲೈವ್, ವಿಡಿಯೋ ಚಾಟ್, ಮೆಸೇಜ್, ಕಾಲ್ ಮೂಲಕ ಕನೆಕ್ಟ್ ಆಗಬಹದು. ಒಟ್ಟಿನಲ್ಲಿ ಒಬ್ಬ ಸ್ಪರ್ಧಿ ಜನರಿಗೆ ನೇರವಾಗಿ ಕನೆಕ್ಟ್ ಆಗಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಸ್ಪರ್ಧಿ ಜನರ ಜೊತೆಗೆ ಯಾವ ರೀತಿ ಕನೆಕ್ಟ್ ಆಗಿದ್ದಾರೆ ಎನ್ನುವದು ರೇಟಿಂಗ್ ಮೂಲಕ ಗೊತ್ತಾಗಲಿದೆ. ಏರಿಯಾ, ವಾರ್ಡ್ ಗಳ ಸಮಸ್ಯೆಗಳ ವಿವರಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ ಎಂದರು.















