ಬೆಂಗಳೂರು: ದೇಶದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಶಾಸ್ತ್ರ, ಫಾರ್ಮಸಿ, ಕೃಷಿ ಹಾಗೂ ಸಂಬಂಧಿತ ಆರೋಗ್ಯ ವಿಜ್ಞಾನ ಕೋರ್ಸ್ಗಳಿಗೆ ಒಂದು ರಾಷ್ಟ್ರ- ಒಂದು ಪ್ರವೇಶ ಪರೀಕ್ಷೆ ವ್ಯವಸ್ಥೆಯನ್ನು ಜಾ.ರಿಗೆ ತರಬೇಕು ಎಂದು ವಿಟಿಯು ನಿವೃತ್ತ ಕುಲಪತಿ ಡಾ ಕೆ. ಬಾಲವೀರ ರೆಡ್ಡಿ ಪ್ರತಿಪಾದಿಸಿದರು.
ಮಂಗಳವಾರ ಸಂಜೆ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ರಾಷ್ಟ್ರೀಯ, ರಾಜ್ಯ, ವಿಶ್ವವಿದ್ಯಾಲಯ ಹಾಗೂ ಖಾಸಗಿ ಸಂಸ್ಥೆಗಳ ಮಟ್ಟದಲ್ಲಿ ಅನೇಕ ಪ್ರವೇಶ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಒಂದೇ ಶೈಕ್ಷಣಿಕ ವರ್ಷದಲ್ಲಿ 5 ರಿಂದ 15 ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಕೋರ್ಸ್ಗಳಿಗೆ ನೀಟ್-ಯುಜಿ, ಇಂಜಿನಿಯರಿಂಗ್ ಗೆ ಜೆಇಇ ಮೇನ್ ಮತ್ತು ಅಡ್ವಾನ್ಸ್ಡ್, ಕೇಂದ್ರ ವಿಶ್ವವಿದ್ಯಾಲಯಗಳಿಗೆ ಸಿಯುಇಟಿ, ವಾಸ್ತುಶಿಲ್ಪಕ್ಕೆ ನಾಟಾ ಸೇರಿದಂತೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ. ಜತೆಗೆ ವಿವಿಧ ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ರಾಜ್ಯ ಸರ್ಕಾರಗಳು ತಮ್ಮದೇ ಪ್ರತ್ಯೇಕ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಆರ್ಥಿಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಪ್ರವೇಶ ಪರೀಕ್ಷೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ವಿಶೇಷವಾಗಿ ನೀಟ್-ಯುಜಿ ಪರೀಕ್ಷೆಗಳ ಸೋರಿಕೆ ಮತ್ತು ಅಕ್ರಮಗಳ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿದೆ. ಸುರಕ್ಷಿತ ಹಾಗೂ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯ ಅಗತ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ – ಒಂದು ಪ್ರವೇಶ ಪರೀಕ್ಷೆ ವ್ಯವಸ್ಥೆ ಅಡಿಯಲ್ಲಿ ರಾಷ್ಟ್ರೀಯ ಮಟ್ಟದ ಏಕೀಕೃತ ಪರೀಕ್ಷೆಯನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಸ್ಮಾರ್ಟ್ ಇನ್ಸ್ಟಾ ಟೆಸ್ಟ್-ಎಐ(ಎಸ್ಐಟಿಎಐ) ಎಂಬ ಎಐ ಆಧಾರಿತ ಪರೀಕ್ಷಾ ಮಾದರಿಯನ್ನು ಪ್ರಸ್ತಾಪಿಸುತ್ತಿದ್ದು, ಪ್ರತಿ ವಿದ್ಯಾರ್ಥಿಗೆ ವಿಭಿನ್ನ ಪ್ರಶ್ನೆ ಪತ್ರಿಕೆ, ಯಾದೃಚ್ಛಿಕ ಪ್ರಶ್ನೆ ಆಯ್ಕೆ, ಬಯೋಮೆಟ್ರಿಕ್ ಪರಿಶೀಲನೆ, ಡಿಜಿಟಲ್ ಸುರಕ್ಷತಾ ವ್ಯವಸ್ಥೆ, ಎಐ ಆಧಾರಿತ ಮೇಲ್ವಿಚಾರಣೆ, ತ್ವರಿತ ಮೌಲ್ಯಮಾಪನ ಹಾಗೂ ಕಾರ್ಯಕ್ಷಮತೆ ವಿಶ್ಲೇಷಣೆ ಮುಂತಾದ ವೈಶಿಷ್ಟ್ಯ ಒಳಗೊಂಡಿರುತ್ತದೆ ಎಂದು ವಿವರಿಸಿದರು.
ಎಸ್ಐಟಿಎಐ ವ್ಯವಸ್ಥೆಯಲ್ಲಿ ಪ್ರಶ್ನೆಗಳು ಪರೀಕ್ಷೆ ಆರಂಭದಲ್ಲೇ ಎಐ ಮೂಲಕ ರಚನೆಯಾಗುತ್ತವೆ. ಪ್ರತಿ ವಿದ್ಯಾರ್ಥಿಗೂ ವಿಭಿನ್ನ ಪ್ರಶ್ನಾ ಕ್ರಮ ಹಾಗೂ ಆಯ್ಕೆಗಳು ದೊರೆಯುತ್ತವೆ. ಪರದೆ ಲಾಕ್ ವ್ಯವಸ್ಥೆ, ನಕಲು ತಡೆ, ಸಿಸಿಟಿವಿ ಮೇಲ್ವಿಚಾರಣೆ ಮತ್ತು ಕ್ಲೌಡ್ ಆಧಾರಿತ ಪರೀಕ್ಷಾ ನಿರ್ವಹಣೆ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಪ್ರಸ್ತಾವಿತ ವ್ಯವಸ್ಥೆಯಲ್ಲಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ, ವಿಷಯಾಧಾರಿತ ಪರೀಕ್ಷಾ ಘಟಕಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಮೂಲಕ ಶ್ರೇಯಾಂಕ ಪ್ರಕಟಿಸುವ ವ್ಯವಸ್ಥೆ ಇರುತ್ತದೆ ಎಂದು ಕೆ. ಬಾಲವೀರ ರೆಡ್ಡಿ ಮಾಹಿತಿ ನೀಡಿದರು.














