ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರಂತೆ ನಟಿಸಿ ಸುಮಾರು 2.9 ಲಕ್ಷ ರೂ ಮೌಲ್ಯದ 4 ಚಿನ್ನದ ಉಂಗುರಗಳನ್ನು ಆಭರಣದ ಅಂಗಡಿಯಿಂದ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೇಗೂರು ಮುಖ್ಯ ರಸ್ತೆಯಲ್ಲಿರುವ ಆಭರಣ ಅಂಗಡಿಯಲ್ಲಿ ನಡೆದಿದೆ.
ಈ ಕುರಿತು ಮಾರುತಿ ಜ್ಯುವೆಲ್ಲರ್ಸ್ ಮಾಲೀಕ ಮಂಗಿಲಾಲ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಧ್ಯಾಹ್ನ 2.15 ರ ಸುಮಾರಿಗೆ ಗ್ರಾಹಕರಂತೆ ನಟಿಸುತ್ತಾ ಬಂದ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಚಿನ್ನದ ಉಂಗುರಗಳನ್ನು ತೋರಿಸುವಂತೆ ಕೇಳಿದ. ಆಗ ನಾನು ಹಲವಾರು ಚಿನ್ನದ ಉಂಗುರಗಳನ್ನು ತೋರಿಸಿದೆ, ಆಗ ಅಪರಿಚಿತ ವ್ಯಕ್ತಿ ಅವುಗಳನ್ನು ಬೆರಳುಗಳಿಗೆ ಧರಿಸಿ ತನಗೆ ಒಪ್ಪುವುದೇ ಎನ್ನುವುದನ್ನು ನೋಡಿಕೊಂಡ. ಹೆಚ್ಚಿನ ವಿನ್ಯಾಸಗಳನ್ನು ತೋರಿಸುವಂತೆ ಹೇಳಿದ. ಇನ್ನಷ್ಟು ಉಂಗುರಗಳನ್ನು ತೆಗೆಯಲು ತಿರುಗಿದಾಗ, ಆ ವ್ಯಕ್ತಿ ಅವಕಾಶವನ್ನು ಬಳಸಿಕೊಂಡು ಸ್ಥಳದಿಂದ ಪರಾರಿಯಾದ ಎಂದು ಹೇಳಲಾಗಿದೆ.
ಕಳ್ಳತನ ಮಾಡುವ ಮೊದಲು ದುಷ್ಕರ್ಮಿ 5 ನಿಮಿಷಗಳ ಕಾಲ ಅಂಗಡಿಯೊಳಗೆ ಇದ್ದ. 3 ಬಿಳಿ ಕಲ್ಲಿನ ಚಿನ್ನದ ಉಂಗುರಗಳು ಮತ್ತು 1 ಹಸಿರು ಕಲ್ಲಿನ ಉಂಗುರವನ್ನು ಅಪರಿಚಿತ ವ್ಯಕ್ತಿ ತಗೆದುಕೊಂಡು ಪರಾರಿಯಾಗಿದ್ದಾನೆ. ಒಟ್ಟು ಉಂಗುರುಗಳ ತೂಕ 21 ಗ್ರಾಂ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.















