ಬೆಂಗಳೂರು: ಹಾಲು ಉತ್ಪಾದಕರ ಹಿತಕಾಪಾಡುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ₹5ರಿಂದ ₹8ಕ್ಕೆ ಹೆಚ್ಚಿಸುವುದರ ಜೊತೆಗೆ, ಮಾರುಕಟ್ಟೆ ದರವನ್ನು ₹8 ಹೆಚ್ಚಿಸಬೇಕು ಎಂದು ಬಮೂಲ್ ಹಾಲು ಒಕ್ಕೂಟದ ಅಧ್ಯಕ್ಷ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ತಿಂಗಳಿನಿಂದ ಹಾಲಿನ ದರ ಹಾಗೂ ಪ್ರೋತ್ಸಾಹ ಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರು ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟ ಎದುರಿಸುತ್ತಿದ್ದು, ಅವರ ಹಿತ ಕಾಪಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈ ಹಿಂದೆ ಪ್ರತಿನಿತ್ಯ ಸುಮಾರು 1.11 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ ಉತ್ಪಾದನೆ 1.05ರಿಂದ 1.06 ಕೋಟಿ ಲೀಟರ್ಗೆ ಇಳಿಕೆಯಾಗಿದೆ. ಪ್ರತಿದಿನ 5ರಿಂದ 6 ಲಕ್ಷ ಲೀಟರ್ವರೆಗೆ ಹಾಲಿನ ಉತ್ಪಾದನೆ ಕುಂಠಿತವಾಗುತ್ತಿದೆ. ಭಾರತದಲ್ಲೇ ನಂದಿನಿ ಹಾಲಿನ ದರ ಅತ್ಯಂತ ಕಡಿಮೆ ಇದೆ. ಪ್ರೋತ್ಸಾಹ ಧನ ಮತ್ತು ಮಾರುಕಟ್ಟೆ ದರ ಎರಡನ್ನೂ ಹೆಚ್ಚಿಸುವ ಅಗತ್ಯವಿದೆ ಎಂದರು.
ರಾಜ್ಯದಲ್ಲಿರುವ 16 ಹಾಲು ಒಕ್ಕೂಟಗಳೂ ಈ ಬೇಡಿಕೆಗೆ ಒಗ್ಗಟ್ಟಾಗಿ ನಿಂತಿವೆ. ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಸಚಿವ ಸಂಪುಟ ಸಭೆ ಕರೆದು ಹಾಲಿನ ದರ ಹಾಗೂ ಪ್ರೋತ್ಸಾಹ ಧನ ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಹಾಲು ಉತ್ಪಾದಕರ ಸಂಘಟನೆಗಳ ನೇತೃತ್ವದಲ್ಲಿ ವಿಧಾನಸೌಧ ಚಲೋ ನಡೆಸಿ, ವಿಧಾನಸೌಧ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ನಾಗರಾಜ್ ಎಚ್ಚರಿಕೆ ನೀಡಿದರು.














