ಬೆಂಗಳೂರು: ನಗರದ ಬೆಸ್ಕಾಂ ಪಶ್ಚಿಮ-4ನೇ ಉಪವಿಭಾಗ ಹಾಗೂ ಕೆಪಿಟಿಸಿಎಲ್ ವತಿಯಿಂದ ಗಾಂಧಿನಗರದ ಆನಂದರಾವ್ ವೃತ್ತ ಕಚೇರಿ ಆವರಣದಲ್ಲಿ ವಿನಾಯಕ ಪೂಜೆ ಮಹೋತ್ಸವವನ್ನು ಆಚರಿಸಲಾಯಿತು.
ಈ ಕುರಿತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ನೌಕರರು ಮತ್ತು ಅಧಿಕಾರಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ಅದೇ ರೀತಿ ಪಶ್ಚಿಮ-4ನೇ ಉಪವಿಭಾಗದಲ್ಲಿಯೂ ಎಲ್ಲರೂ ಸೇರಿ ವಿಘ್ನೇಶ್ವರನ ಆರಾಧನೆ ಮಾಡಲಾಗುತ್ತಿದೆ ಎಂದರು.
ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವುದು ಸವಾಲಿನ ಹಾಗೂ ಅಪಾಯದ ಕೆಲಸವಾಗಿದೆ. ನೌಕರರು ಪ್ರತಿದಿನವೂ ವಿದ್ಯುತ್ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ ಯಾವುದೇ ರೀತಿಯ ಅಪಘಾತ, ವಿಘ್ನ ಅಥವಾ ಅಡಚಣೆ ಉಂಟಾಗದಂತೆ ಎಲ್ಲ ನೌಕರರು ಸುರಕ್ಷಿತವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ. ವಿಘ್ನ ನಿವಾರಕನಾದ ಗಣೇಶನಿಗೆ ಪೂಜೆ ಸಲ್ಲಿಸಿ, ನೌಕರರು ಮತ್ತು ಅಧಿಕಾರಿಗಳ ಕಾರ್ಯಗಳು ಸುಗಮವಾಗಿ ಸಾಗಲಿ ಎಂದು ಬೇಡಿಕೊಂಡಿದ್ದೇವೆ ಎಂದರು.
ಕೆಪಿಟಿಸಿಎಲ್ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಅಶ್ವತ್ಥಪ್ಪ ಎಚ್.ಆರ್. ಮಾತನಾಡಿ, ಸುಮಾರು 29 ವರ್ಷಗಳಿಂದ ಗಣೇಶೋತ್ಸವವನ್ನು ಇದೇ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ಗಣೇಶನ ಕೃಪೆಯಿಂದ ಎಲ್ಲ ನೌಕರರು ಹಾಗೂ ಅವರ ಕುಟುಂಬಗಳಿಗೆ ಆರೋಗ್ಯ, ಭಾಗ್ಯ ಮತ್ತು ಐಶ್ವರ್ಯ ದೊರೆಯಲಿ ಎಂದು ಆಶಿಸಿದರು.
ಪಶ್ಚಿಮ-4ನೇ ಉಪವಿಭಾಗದ ಸಹಾಯಕ ಎಂಜಿನಿಯರ್ ಹಾಗೂ ನೌಕರರ ಸಂಘದ ಕಾರ್ಯದರ್ಶಿ ಆನಂದ್ ಕುಮಾರ್ ಪಿ.ಎಸ್. ಮಾತನಾಡಿ, ಪಶ್ಚಿಮ ವಿಭಾಗದ ನಾಲ್ಕನೇ ಉಪವಿಭಾಗದಲ್ಲಿ ಪ್ರತಿವರ್ಷವೂ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ವಿಶೇಷವಾಗಿ ಉತ್ಸವವನ್ನು ಆಯೋಜಿಸಲಾಗಿದೆ. ನೌಕರರು ತಮ್ಮ ದಿನನಿತ್ಯದ ಕರ್ತವ್ಯಗಳ ಜತೆಗೆ ಧಾರ್ಮಿಕ ಆಚರಣೆಯಲ್ಲಿಯೂ ಒಗ್ಗಟ್ಟಿನಿಂದ ಪಾಲ್ಗೊಂಡಿದ್ದಾರೆ. ಎಲ್ಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯಲಿ ಮತ್ತು ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
4ನೇ ಪಶ್ಚಿಮ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ 4ನೇ ಹೊಸಹಳ್ಳಿ ತೋಟನಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು, ಬೆಸ್ಕಾಂ, ಕೆಪಿಟಿಸಿಎಲ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














