ಬೆಂಗಳೂರು: ಇಂಜಿನಿಯರ್ ಗಳಿಗೆ ವೃತ್ತಿಗೌರವ ನೀಡುವ ಉದ್ದೇಶದಿಂದ ಅವರ ಹೆಸರಿನ ಮುಂದೆ Er. (ಅಭಿಯಂತರ) ಎಂದು ಬಳಸಲು ಆದೇಶ ಹೊರಡಿಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಕರ್ನಾಟಕ ವಿಭಾಗ ಮಂಗಳವಾರ ಆಯೋಜಿಸಿದ್ದ 59ನೇ ಇಂಜಿನಿಯರ್ ದಿನಾಚರಣೆಯನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು. ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಇಂಜಿನಿಯರ್ ಗಳ ಅತ್ಯಮೌಲ್ಯವಾದ ಕೊಡುಗೆಯನ್ನು ಸ್ಮರಿಸಲು ಹಾಗೂ ಗೌರವ ಸಮರ್ಪಣೆ ಮಾಡುವ ಸಲುವಾಗಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನವಾದ ಸೆಪ್ಟೆಂಬರ್ 15 ಅನ್ನು ಇಂಜಿನಿಯರ್ ಗಳ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಿಸಲು ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ರಸ್ತೆ ಕೇವಲ ಶೇ. 8 ರಷ್ಟಿದ್ದು, ದೇಶದ ಉಳಿದೆಡೆಗಳಲ್ಲಿ ಶೇ. 18 ರಷ್ಟು ರಸ್ತೆಗಳಿವೆ. ಕೆಲವೊಂದು ಬಡಾವಣೆಗಳನ್ನು ಹೊರತುಪಡಿಸಿದರೆ ಬೆಂಗಳೂರು ಯೋಜನಾಬದ್ಧ ನಗರವಲ್ಲ. ಇಲ್ಲಿ ರಸ್ತೆಗಳು ಬಹಳ ಚಿಕ್ಕದಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೊಸ ಕರ್ನಾಟಕ ಮಾಡುವುದು ನನ್ನ ಕಲ್ಪನೆಯಾಗಿದೆ. ಟೌನ್ ಪ್ಲಾನಿಂಗ್ ಖಾತೆಯನ್ನು ನಾನೇ ನಿರ್ವಹಿಸುತ್ತಿದ್ದು, ಈ ಬಗ್ಗೆ ಸ್ಪಷ್ಠ ಚಿಂತನೆ ಹೊಂದಿದ್ದೇನೆ. ಪ್ರತಿಯೊಂದು ಪಟ್ಟಣಕ್ಕೂ ಒಂದು ವರ್ತುಲ ರಸ್ತೆ ನಿರ್ಮಿಸುವ ಚಿಂತನೆಯಿದ್ದು, ಇದರಿಂದ ವಾಹನ ದಟ್ಟಣೆ ಪರಿಹರಿಸಿದಂತಾಗುತ್ತದೆ ಎಂದರು.
ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಹೊಸ ಟೌನ್ ಪ್ಲಾನಿಂಗ್ ಕಾಲೇಜು ಸ್ಥಾಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೊಬಿಲಿಟಿ ಯೋಜನೆಗೆ ಒತ್ತು ನೀಡಲಾಗುತ್ತಿದೆ. ನವ ಕರ್ನಾಟಕ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರ್ ಎಂ ವಿಯವರ ತ್ಯಾಗ, ಚಿಂತನೆಗಳು ನಮಗೆ ಮಾರ್ಗದರ್ಶನವಾಗಿದೆ. ನವ ಕರ್ನಾಟಕ ನಿರ್ಮಾಣದಿಂದ ನವಭಾರತ ನಿರ್ಮಾಣ ಸಾಧ್ಯವಿದೆ. ಕರ್ನಾಟಕದ ಬೆಳವಣಿಗೆಯಲ್ಲಿ ಭಾರತದ ಬೆಳವಣಿಗೆ ಅಡಗಿದೆ. ದಕ್ಷಿಣ ಭಾರತದ ಜ್ಞಾನ ಪ್ರತಿಭೆಗಳು ಭಾರತದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.
ಬೆಂಗಳೂರಿಗೆ ಮೆಟ್ರೋವನ್ನು 500 ಕಿ.ಮೀ. ವಿಸ್ತರಿಸುವ ಯೋಜನೆ ಬಗ್ಗೆ ಬಿ.ಎಂ.ಆರ್.ಸಿ.ಎಲ್ ಪ್ರಗತಿ ಪರಿಶೀಲನಾ ಸಭೆಯನ್ನು ಬುಧವಾರ ನಡೆಸಲಾಗುತ್ತಿದೆ. 45 ಕಿ.ಮಿ. ಡಬ್ಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದೆ. ಆದ್ದರಿಂದ ಕೇವಲ 16 ಕಿ.ಮೀ. ಗೆ ಅನುಮತಿಸಿದ್ದಾರೆ. ರಸ್ತೆಗಳನ್ನು ಒಡೆಯಲು ಆಗದ ಕಾರಣ, 16 ಕಿ.ಮೀ. ಡಬ್ಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ಯೋಜನೆಗೆ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರನ್ನು ಒಮ್ಮೆ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ 230 ಇಂಜಿನಿಯರಿಂಗ್ ಕಾಲೇಜುಗಳಿದ್ದು, ಭಾರತದಲ್ಲಿಯೇ ಅತಿ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳು ನಮ್ಮಲ್ಲಿವೆ. ಪ್ರತಿ ವರ್ಷ ಒಂದು ಲಕ್ಷ ಇಂಜಿನಿಯರ್ ಗಳನ್ನು ರಾಜ್ಯದಲ್ಲಿ ತಯಾರು ಮಾಡಲಾಗುತ್ತಿದೆ. ಈ ವರ್ಷ 23 ಸಾವಿರ ಇಂಜಿನಿಯರ್ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೆ ಉಳಿದುಕೊಂಡಿವೆ. ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 24 ಲಕ್ಷ ಐಟಿ ವೃತ್ತಿಪರರಿದ್ದಾರೆ ಎಂದರು.
ದೇಶದ ಪ್ರಗತಿಯಲ್ಲಿ, ಪ್ರತಿಯೊಬ್ಬರ ಬದುಕಿನಲ್ಲಿ ಇಂಜಿನಿಯರ್ ಗಳು ಅವಿಭಾಜ್ಯ ಅಂಗವಾಗಿದ್ದಾರೆ. ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಸ್ಮರಿಸುವ ದಿನವಿದು. ಮಹಾನ್ ಇಂಜಿನಿಯರ್ ಗಳನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಜ್ಞಾನವೇ ಅಭಿವೃದ್ಧಿಯಾಗಿ ತಂತ್ರಜ್ಞಾನವೇ ಜನರ ಬದುಕನ್ನು ಪರಿವರ್ತಿಸುವ ದಿನ ಇದಾಗಿದೆ. ಎಲ್ಲರಲ್ಲೂ ಹೊಸ ಆಲೋಚನೆಗಳನ್ನು ಮೊಳೆಯಬೇಕು. ಈ ಕುರಿತು ವಿಶ್ವೇಶ್ವರಯ್ಯನವರು ಆಗಲೇ ದೂರಾಲೋಚನೆಯಿದ್ದರು. ಕೈಗಾರೀಕರಣಗೊಳಿಸಿ ಅಥವಾ ವಿನಾಶ ಎಂದು ಘೋಷಣೆ ಮಾಡಿದ್ದರು ಎಂದು ಹೇಳಿದರು.














