ಬೆಂಗಳೂರು: ಮಾಜಿ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮತ್ತು ಉಮಾಪತಿ ಶ್ರೀನಿವಾಸಗೌಡ ಅವರುಗಳು ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಎಸಗಲು ಮುಂದಾಗಿದ್ದಾರೆ ಎಂದು ರಾಜ್ಯ ಒಕ್ಕಲಿಗ ಸಂಘದ ಪದಾಧಿಕಾರಿಗಳು ಒಕ್ಕೂರಲಿಂದ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ಒಕ್ಕಲಿಗರ ಸಂಘದಲ್ಲಿ ನಡೆದಿದೆ ಎನ್ನುವ ಅಕ್ರಮದ ಬಗ್ಗೆ ಸಂಘಕ್ಕೆ ಲಿಖಿತ ದೂರು ನೀಡಿ ಸಂಘದ ಪದಾಧಿಕಾರಿಗಳೊಂದಿಗೆ ಕೂತು ಚರ್ಚಿಸಬಹುದಾಗಿತ್ತು. ಆದರೆ ಇವೆಲ್ಲವನ್ನು ಬಿಟ್ಟು ಅವಾಚ್ಯ ಪದ ಪ್ರಯೋಗ ಮಾಡಿ ಆರೋಪ ಮಾಡಲಾಗುತ್ತಿದೆ. ಕೋನಪ್ಪ ರೆಡ್ಡಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಗೂ ಉಮಾಪತಿ ಶ್ರೀನಿವಾಸಗೌಡ ಖಜಾಂಚಿಯಾಗಿದ್ದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಆರೋಪದ ಬಗ್ಗೆ ಸಹಕಾರ ಇಲಾಖೆ ತನಿಖೆ ನಡೆಸಿ ಇಬ್ಬರಿಗೂ ನೋಟಿಸ್ ನೀಡಿದೆ. ತಮ್ಮ ಮೇಲಿನ ಆಪಾದನೆಯನ್ನು ಮರೆ ಮಾಚಲು ಇಂತಹ ಆರೋಪಗಳನ್ನು ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಆರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ಇದೆ. ಆದ್ದರಿಂದ ಈ ತರಹದ ಆರೋಪ ಮಾಡುವ ಮೂಲಕ ಪ್ರಚಾರ ಪಡೆಯಲು ಮುಂದಾಗುತ್ತಿದ್ದಾರೆ. ಸಂಘದಲ್ಲಿ ಬೈಲಾ ಪ್ರಕಾರವೇ ಎರಡು ವರ್ಷಗಳಿಗೆ ಮಾತ್ರವೇ ಗುತ್ತಿ ಆಧಾರದಲ್ಲಿ ನೇಮಕಾತಿ ಮಾಡಿದ್ದೇವೆ. ಸಂಘದಲ್ಲಿ ನಡೆದಿದೆ ಎನ್ನಲಾಗುವ ಅಕ್ರಮ ನೇಮಕಾತಿ ಕುರಿತಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮೆಡಿಕಲ್ ಕಾಲೇಜಿನ ಬಿ ಬ್ಲಾಕ್ ಕಟ್ಟಡ ನಿರ್ಮಾಣಕ್ಕಾಗಿ ಕಾಮಗಾರಿ ನೀಡಲು ಕೆವಿಆರ್ ಕಂಪನಿಯಿಂದ ಉಮಾಪತಿ ಶ್ರೀನಿವಾಸಗೌಡ 50 ಲಕ್ಷ ಲಂಚ ಪಡೆದಿದ್ದಾರೆ. ಆದರೆ ಬೊಮ್ಮನಹಳ್ಳಿಯಲ್ಲಿ ಒಕ್ಕಲಿಗರ ಸಂಘಕ್ಕೆ ಸುಮಾರು 3 ಕೋಟಿ ಬೆಲೆ ಬಾಳುವ ಜಮೀನನ್ನು ನೀಡಿರುವುದಾಗಿ ಉಮಾಪತಿ ಅವರು ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ. ಅವರು ಸಂಘಕ್ಕೆ ಯಾವುದೇ ಜಮೀನನ್ನು ನೀಡಿರುವುದಿಲ್ಲ, ಇದು ಸತ್ಯಕ್ಕೆ ದೂರವಾದ ಮಾತು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆಂಚಪ್ಪಗೌಡ, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಶ್ರೀಧರ್, ಉಪಾಧ್ಯಕ್ಷ ಎಂ.ಪುಟ್ಟಸ್ವಾಮಿ, ದೇವರಾಜ್ ಇತರರಿದ್ದರು.














