ಬೆಳಗಾವಿ: ರಾಯಬಾಗ ತಹಸೀಲ್ದಾರ್ ಕಚೇರಿಯ ಕೇಸ್ವರ್ಕರ್ ಪರವಾಗಿ ಮಧ್ಯವರ್ತಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನಲೆಯಲ್ಲಿ 80 ಸಾವಿರ ರೂಪಾಯಿ ನಗದನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಲಾಗಿದೆ.
ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಜಮೀನು ಪಹಣಿ ದಾಖಲೆಯಲ್ಲಿದ್ದ 15 ವರ್ಷಗಳ ಕಾಲದ ಪರಭಾರೆಗೆ ನಿರ್ಬಂಧಿಸಿದ ಷರತ್ತನ್ನು ತೆಗೆದುಹಾಕಲು 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಹಣವನ್ನು ಮಧ್ಯವರ್ತಿಯ ಮೂಲಕ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತ ಶಿವಾನಂದ ದುಂಡಗಿ ಅವರ ಅಜ್ಜನಿಗೆ 1974 ರಲ್ಲಿ ಭೂ ನ್ಯಾಯಮಂಡಳಿ ಆದೇಶದಂತೆ ಮಂಜೂರಾದ ಜಮೀನನ್ನು ಕನಿಷ್ಠ 15 ವರ್ಷಗಳ ವರೆಗೆ ಪರಭಾರೆ ಮಾಡಬಾರದು ಎಂದು ಪಹಣಿಯಲ್ಲಿದ್ದ ನಿರ್ಬಂಧವನ್ನು ತೆಗೆದು ಆದೇಶ ಮಾಡಿ ಕೊಡುವಂತೆ ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ಹಿನ್ನಲೆಯಲ್ಲಿ ತಹಸೀಲ್ದಾರ್ ಅವರಿಂದ ಆದೇಶ ಮಾಡಿಸಿ ಕೊಡಲು ಕೇಸ್ವರ್ಕರ್ ಚಂದ್ರಮಪ್ಪ ಮೋರಟಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚ ನೀಡಲು ಮನಸಿಲ್ಲದೆ ಶಿವಾನಂದ ದುಂಡಗಿ ಜನವರಿ 27 ರಂದು ಕರ್ನಾಟಕ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದರು, ಈ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ಪಿ ಮಲ್ಲೇಶ್ ಟಿ ಭ್ರಷ್ಟಾಚಾರ ಕಾಯ್ದೆ ಅಡಿ ದೂರು ದಾಖಲಿಸಿಕೊಂಡಿದ್ದರು. ಅದರಂತೆ ಇನ್ಸ್ಪೆಕ್ಟರ್ ನಿರಂಜನ ಪಾಟೀಲ್ ಹಾಗೂ ಸಿಬ್ಬಂದಿಗಳ ತಂಡ ಅದೇ ದಿನ ಸಂಜೆ 5 ಗಂಟೆಗೆ ಆರೋಪಿತನಾದ ಚಂದ್ರಮಪ್ಪ ಮೋರಟಗಿ ದೂರುದಾರರಿಂದ 80 ಸಾವಿರ ರುಪಾಯಿ ಲಂಚದ ಹಣವನ್ನು ಮತ್ತೊಬ್ಬ ಆರೋಪಿ ಮಧ್ಯವರ್ತಿ ನಾಗೇಂದ್ರ ಕೃಷ್ಣಾ ಮಾರಾಸರ್ಕರ್ ಮೂಲಕ ಸ್ವೀಕರಿಸುವ ವೇಳೆ ದಾಳಿ ನಡೆಸಿ ಇಬ್ಬರೂ ಆರೋಪಿತರನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ ಇನ್ಸ್ಪೆಕ್ಟರ್ ಗಳಾದ ಬಾಲಚಂದ್ರ ಲಕ್ಕಮ್ಮ, ಗೋವಿಂದಗೌಡ ಹಾಗೂ ಸಿಬ್ಬಂದಿಗಳಾದ ರವಿ, ರಾಜು, ಸಂತೋಷ, ಗಿರೀಶ್, ಅಭಿಜಿತ್, ಬಸವರಾಜ ಇದ್ದರು.















