ಖಾನಾಪುರ, ಜೂನ್ ೩- ಖಾನಾಪುರ ಸರ್ವೆ ಆಫೀಸಿನ ಸರ್ವೆಯರ್ ಒಬ್ಬರು ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಸರ್ವೆಯರ್ ವಿನೋದ ಸಂಬಾನಿ ಎಂಬುವರೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಪಿಟಿ ಶೀಟ್ ಮಾಡಿ ಕೊಡಲು ಖಾನಾಪುರದ ಸದಾಶಿವ ಪರಸಪ್ಪ ಕಾಂಬಳೆ ಎಂಬುವರಿಂದ ೪,೫೦೦ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ವಿನೋದ ಟ್ರ್ಯಾಪ್ ಆಗಿದ್ದಾರೆ. ಪಿಟಿ ಶೀಟ್ ಮಾಡಿ ಕೊಡಲು ವಿನೋದ ಇವರು ಕಾಂಬಳೆ ಅವರಿಂದ ಲಂಚದ ಬೇಡಿಕೆ ಇಟ್ಟಿದ್ದರು. ಆದರೆ ಲಂಚ ಕೊಡಲು ಇಷ್ಟವಿಲ್ಲದ ಕಾಂಬಳೆ ಇವರು ಬೆಳಗಾವಿ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ಅದರಂತೆ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಎಸ್ ಪಿ ಹನುಮಂತರಾಯ ಇವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಭರತ್ ರಡ್ಡಿ ನೇತೃತ್ವದಲ್ಲಿ ಲೋಕಾಯುಕ್ತ ಇನ್ ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ, ಇನ್ ಸ್ಪೆಕ್ಟರ್ ಸಂಗಮೇಶ ಹೊಸಮನಿ ಸ್ಥಳದಲ್ಲಿ ದಾಳಿ ಮಾಡಿ ಲಂಚದ ಹಣದ ಸಮೇತ ಸರ್ವೆಯರ್ ವಿನೋದ ಸಂಬಾನಿ ಇವರನ್ನು ಬಂಧಿಸಿದ್ದಾರೆ.