ಬೆಳಗಾವಿ: ಪ್ರಜಾ ನೆರಳು ದಿನಪತ್ರಿಕೆಯಲ್ಲಿ 17-01-2026 ರಂದು ಪ್ರಕಟಿಸಲಾಗಿದ್ದ 90 ಪರ್ಸೆಂಟ್ ಕೆಲಸ ಕಾನೂನು ಬಾಹಿರ; ಪಿಡಿಒ ಪ್ರಶಾಂತ ಮುನವಳ್ಳಿ ಸ್ಫೋಟಕ ಆಡಿಯೊ ಬಹಿರಂಗ” ಶೀರ್ಷಿಕೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಮೋದಗಾ ಮತ್ತು ಹಿರೇಬಾಗೇವಾಡಿ ಪಿಡಿಒ ಪ್ರಶಾಂತ ಮುನವಳ್ಳಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ ಅವರು 27-01-2026 ರಂದು ಪ್ರಶಾಂತ ಮುನವಳ್ಳಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಜಾ ನೆರಳು ದಿನಪತ್ರಿಕೆಯಲ್ಲಿ ಸದರಿ ಪಿಡಿಒ ಅವರು ಮಾತನಾಡಿದ್ದ ಆಡಿಯೊ ಆಧರಿಸಿದ ವರದಿ ಹಾಗೂ ಆಡಿಯೊ ಬಹಿರಂಗವಾದ ನಂತರ ಮೋದಗಾ ಗ್ರಾಮ ಪಂಚಾಯಿತಿಯ ಸಮಸ್ತ ಸದಸ್ಯರು ಮಂಗಳವಾರ ದಿ.27 ರಂದು ಪಿಡಿಒ ಪ್ರಶಾಂತ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು.
ಅಲ್ಲದೆ ಸದರಿ ಪಿಡಿಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕೂಡ ಉಗ್ರ ಪ್ರತಿಭಟನೆ ಮಾಡಿದ್ದರು. ಪಿಡಿಒ ಪ್ರಶಾಂತ ಮುನವಳ್ಳಿ ತಮ್ಮ ಸೇವಾವಧಿಯಲ್ಲಿ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗುಂಡು ಶಾಮ ತಳವಾರು ಅವರು ಗಂಭೀರ ಆರೋಪ ಮಾಡಿದ್ದಾರೆ. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಿಜಯ ಮಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕಾಂತ ಮ. ಹುಲ್ಲೋಳಿ, ಜಿಲ್ಲಾ ಖಜಾಂಚಿ ಅಶೋಕ ಕೋಲಕಾರ, ವಕೀಲರಾದ ಬಾಲಕೃಷ್ಣ ಕಾಂಬಳೆ ಸೇರಿದಂತೆ ಅನೇಕ ಕಾರ್ಯಕರ್ತರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ಮಾಡಿದ್ದರು. ಪ್ರಜಾ ನೆರಳು ದಿನ ಪತ್ರಿಕೆಯ ವರದಿ ಹಾಗೂ ತದನಂತರ ನಡೆದ ಪ್ರತಿಭಟನೆಗಳಿಗೆ ಮಣಿದ ಸರ್ಕಾರ ಈಗ ಪಿಡಿಒ ಪ್ರಶಾಂತ ಮುನವಳ್ಳಿ ಅಮಾನತುಗೊಳಿಸಿ ಆದೇಶಿಸಿದೆ.
ಸರ್ಕಾರಿ ಜಾಗ ಮಾರಾಟ:
ಈ ಪ್ರಕರಣದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ದಲಿತ ಮುಖಂಡ ಗುಂಡು ಶಾಮ ತಳವಾರ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಪಿಡಿಒ ಪ್ರಶಾಂತ ಮುನವಳ್ಳಿ ನೀಡಲಿಲ್ಲ. ಅಲ್ಲದೆ ಈತ ಸರ್ಕಾರಿ ಜಾಗವನ್ನು ಇ-ಸ್ವತ್ತು ಮಾಡಿ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪತ್ರಿಕೆಯ ವರದಿಗೆ ಶ್ಲಾಘನೆ:
ಈ ಮೊದಲೇ ಪಿಡಿಒ ಪ್ರಶಾಂತ ಮುನವಳ್ಳಿ ವಿರುದ್ಧ ತಾಪಂ ಮತ್ತು ಜಿಪಂ ಗೆ ಹಲವಾರ ಬಾರಿ ನಾವು ಸದಸ್ಯರು ಸೇರಿ ದೂರು ಸಲ್ಲಿಸಿದ್ದೆವು. ಆದರೆ ಪ್ರಜಾ ನೆರಳು ದಿನಪತ್ರಿಕೆಯಿಂದ ಆಡಿಯೊ ಬಿಡುಗಡೆಯಾದ ನಂತರ ನಾವು ಪಿಡಿಒ ಪ್ರಶಾಂತ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಈ ವರದಿ ಪ್ರಕಟಿಸಿದ ಪತ್ರಿಕೆಗೆ ಧನ್ಯವಾದಗಳು ಎಂದು ಮೋದಗಾ ಗ್ರಾಪಂ ಸದಸ್ಯರಾದ ಮಾರುತಿ ಮುಗಳಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.















