ಬೆಳಗಾವಿ, ಜೂನ್ ೨- ರಾಜ್ಯದಲ್ಲಿನ ಎಲ್ಲ ವಾಸದ ಕಟ್ಟಡ ಮತ್ತು ನಿವೇಶನಗಳಿಗೆ ಇ-ಖಾತಾ ಮಾಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು ತಿಳಿದಿದೆ. ಆದರೆ ಸದ್ಯ ಈ ಇ-ಖಾತಾ ನೆಪದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನತೆಯನ್ನು ಸುಲಿಯುವ ಮಹಾ ದಂಧೆ ನಡೆಯುತ್ತಿದೆ.
ಇ-ಖಾತಾ ಮಾಡಿಸಲು ನಾಗರಿಕರು ಪಾಲಿಕೆಗೆ ಅಲೆದಾಡಿ ಹೈರಾಣಾಗುತ್ತಿದ್ದಾರೆ. ಖಾತಾ ಮಾಡಿಸಲು ಬಂದವರಿಗೆ ಆ ದಾಖಲೆ ಸರಿ ಇಲ್ಲ, ಈ ದಾಖಲೆ ಸರಿ ಅಲ್ಲ ಅಂತಾ ಹೇಳುತ್ತ ಪಾಲಿಕೆ ಸಿಬ್ಬಂದಿ ಆಟವಾಡಿಸುತ್ತಿದ್ದಾರೆ. ಕೆಲವರು ಎಲ್ಲಾ ದಾಖಲೆಗಳು ಸರಿ ಇದ್ದರೂ ವಾರಗಟ್ಟಲೇ ಅಲೆದಾಡಿದರೂ ಕೆಲಸ ಆಗುತ್ತಿಲ್ಲ. ತಮ್ಮ ಫೈಲ್ ಯಾವ ಟೇಬಲ್ ಗೆ ಹೋಗಿದೆ ಎಂಬುದು ಕೂಡ ತಿಳಿಯದೆ ಜನ ಕಂಗಾಲಾಗುತ್ತಿದ್ದಾರೆ.

ಜನರಿಗೆ ಸಹಾಯ ಮಾಡಬೇಕಾದ ಪಾಲಿಕೆ ಸಿಬ್ಬಂದಿ ಜನರನ್ನು ತಮ್ಮ ಕೈಲಾದಷ್ಟು ದಾರಿ ತಪ್ಪಿಸುತ್ತಿದ್ದಾರೆ. ಲಂಚ ಕೊಡದೇ ಇಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ಇ-ಖಾತಾ ಮಾಡಿಸಲು ಸಾವಿರಾರು ಲಂಚಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಜನ ಆರೋಪಿಸುತ್ತಿದ್ದಾರೆ.
ಇ-ಖಾತಾ ಮಾಡಿಸಲು ಪ್ರತಿದಿನ ನೂರಾರು ಜನ ಕ್ಯೂನಲ್ಲಿ ನಿಲ್ಲುವಂತಾಗಿದೆ. ನಾಗರಿಕರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಇದಕ್ಕಾಗಿ ಅಲೆದಾಡುವಂತಾಗಿದೆ ಎಂದು ಪಾಲಿಕೆಯ ಆವರಣಕ್ಕೆ ಭೇಟಿ ನೀಡಿದ ನಮ್ಮ ಪತ್ರಿಕೆಯ ಪ್ರತಿನಿಧಿಯ ಮುಂದೆ ಜನ ಬೇಸರ ತೋಡಿಕೊಂಡರು.
ಇಲ್ಲಿನ ಈ ಸಮಸ್ಯೆ ಪರಿಹರಿಸಲು ಮಾನ್ಯ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಜನ ಆಗ್ರಹಿಸಿದರು. ಅಲ್ಲದೆ ಈ ಬಗ್ಗೆ ಲೋಕಾಯುಕ್ತ ಪೊಲೀಸರು ಕೂಡ ಗಮನಹರಿಸಬೇಕೆಂದು ಜನ ಒತ್ತಾಯಿಸಿದ್ದಾರೆ.
