ಬೆಳಗಾವಿ: ಕಣಕುಂಬಿ ಗ್ರಾಮ ಪಂಚಾಯತಿಯಿಂದ ವ್ಯಾಯಮ ಶಾಲೆ ಆರಂಭಿಸಲಾಗಿದ್ದು, ಇದರ ಉದ್ಘಾಟನೆಯನ್ನು ಖಾನಾಪುರ ತಾಲೂಕು ಪಂಚಾಯತ ಎಡಿಪಿಆರ್ ವಿಜಯ ಕುಮಾರ್ ಸೋಮವಾರ ನೆರವೇರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ವಿಜಯ ಕುಮಾರ್ ಅವರು ಈಗಿನ ವಿದ್ಯಾರ್ಥಿಗಳು ಹಾಗೂ ಯುವಜನತೆ ಮೊಬೈಲ್ ಗೀಳಿಗೆ ಒಳಗಾಗಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಪ್ರೇರೇಪಿತರಾಗಿ ಓದಿನ ಕಡೆ ಗಮನ ಹರಿಸದೆ ಕೆಟ್ಟ ಚಟಕ್ಕೆ ಬೀಳುತ್ತಿದ್ದಾರೆ. ಅಪರಾಧ ಚಟುವಟಿಗಳತ್ತ ಮುಖ ಮಾಡಿದ ಪ್ರಕರಣಗಳನ್ನು ಸಹ ಸಾಕಷ್ಟು ನೋಡುತ್ತಿದ್ದೇವೆ ಇಂತಹ ಪರಿಸ್ಥಿತಿಯಲ್ಲಿ ಕಣಕುಂಬಿ ಗ್ರಾಮ ಪಂಚಾಯತಿಯಿಂದ ವ್ಯಾಯಾಮಶಾಲೆ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಲೋಕಾರ್ಪಣೆಗೊಂಡಿರುವ ವ್ಯಾಯಾಮ ಶಾಲೆಯನ್ನು ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ದೈಹಿಕವಾಗಿ ಸದೃಢರಾಗಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು. ಯೋಗ ಧ್ಯಾನದಂತಹ ಉತ್ತಮ ಪದ್ಧತಿಗಳನ್ನು ದಿನನಿತ್ಯ ಅಳವಡಿಸಿಕೊಂಡು ಒಳ್ಳೆಯ ಮಾನಸಿಕ, ದೈಹಿಕ ಆರೋಗ್ಯ ಹೊಂದಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಂಥಾಲಯದ ಲೋಕಾರ್ಪಣೆ ಕಾರ್ಯಕ್ರಮ ಕೂಡ ನಡೆಯಿತು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಕಣಕುಂಬಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಡಿ ಮುಲ್ಲಾ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಸುನಿಲ್, ಕೆನರಾ ಬ್ಯಾಂಕ್ ಮ್ಯಾನೇಜರ್ ಅಣ್ಣಾರೆಡ್ಡಿ, ಮುಖ್ಯೋಪಾಧ್ಯಾಯರಾದ ಎಸ್.ಡಿ ಮುಲ್ಲಾ ಅವರುಗಳನ್ನು ಸನ್ಮಾನಿಸಲಾಯಿತು. ಅಧಿಕಾರಾವಧಿ ಪೂರೈಸಿದ ಕಣಕುಂಬಿ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನವನ್ನು ಸಹ ನೆರವೇರಿಸಲಾಯಿತು. ಗ್ರಾಮದ ಹಿರಿಯರಾದ ರಾಜಾರಾಮ್ ಗಾವಡೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.















