ಬೆಳಗಾವಿ: ಖಾನಾಪುರ ತಾಲೂಕಿನ ಕನಕುಂಬಿ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಕೆನರಾ ಬ್ಯಾಂಕ್ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ಕುಡಿಯುವ ನೀರಿನ ಅನುಕೂಲಕ್ಕಾಗಿ ವಾಟರ್ ಪ್ಯೂರಿಫೈಯರ್ ಮತ್ತು ಸ್ಮಾರ್ಟ್ ಬೋರ್ಡ್ ಅನ್ನು ಅಳವಡಿಸುವ ಕಾರ್ಯದ ಪರಿಶೀಲನೆಯನ್ನು ಬ್ಯಾಂಕ್ ನ ಹಿರಿಯ ಅಧಿಕಾರಿಗಳು ಕೈಗೊಂಡರು.
77ನೇ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ ಅವರುಗಳು ಮಾವಲಿ ಹೈಸ್ಕೂಲ್ ಗೆ ಸಹ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಘೋಷಣೆಯನ್ನು ಈ ಸಂದರ್ಭದಲ್ಲಿ ಮಾಡಿದರು. ಎರಡೂ ಶಾಲೆಗಳಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಸಹ ಸಹಾಯ ಹಸ್ತ ನೀಡುವುದಾಗಿ ಕೂಡ ಈ ಸಂದರ್ಭದಲ್ಲಿ ಪೋಷಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀವಿದ್ಯಾ, ಘೋಷಣೆಯಾಗಿರುವ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ವಿವರಗಳನ್ನು ನೀಡಿದರು. ಉತ್ತಮ ಗುಣಮಟ್ಟದ ಉಪಕರಣಗಳನ್ನು ಬಳಸುವುದರಿಂದ ಯೋಜನೆಯ ಹಣ ಸದ್ವಿನಿಯೋಗವಾದಂತೆ ಆಗುತ್ತದೆ. ಸದ್ಯ 10 ಲಕ್ಷ ಮೌಲ್ಯದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳ ಮೇಲುಸ್ತುವಾರಿಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಮುಲ್ಲಾ, ಕಣಕುಂಬಿ ಶಾಖೆಯ ವ್ಯವಸ್ಥಾಪಕ ಅಣ್ಣಾರೆಡ್ಡಿ ವಹಿಸಿಕೊಂಡಿದ್ದು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ವಿಭಾಗಿಯ ವ್ಯವಸ್ಥಾಪಕರಾದ ದಿನಕರ್ ಮಾತನಾಡಿ, ಮಹಾನ್ ವಿಜ್ಞಾನಿ ಮತ್ತು ಭಾರತದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರು ಎಲ್ಲರೂ ಉನ್ನತ ಕನಸುಗಳನ್ನು ಕಾಣಬೇಕು ಎಂದು ಹೇಳಿದ್ದರು. ಕಷ್ಟ ಪಟ್ಟು ಅದರೆಡೆಗೆ ಕಷ್ಟ ಪಟ್ಟು ದುಡಿದು ಕನಸನ್ನು ನನಸು ಮಾಡಬೇಕು. ಈ ಈ ನಿಟ್ಟಿನಲ್ಲಿ ಸಾಗಲು ವಿದ್ಯಾರ್ಥಿಗಳು ಮೊಬೈಲ್ ಫೋನ್ ಗಳನ್ನು ಬಳಸದೆ ಆಟ ಮತ್ತು ಪಾಠಗಳಲ್ಲಿ ತೊಡಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು. ಒಳ್ಳೆಯ ವ್ಯಕ್ತಿಗಳಾಗುವತ್ತ ಸಾಗಿ ದೇಶಕ್ಕೆ ಉತ್ತಮ ನಾಗರಿಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನ ಮತ್ತೊಬ್ಬ ವಿಭಾಗಿಯ ವ್ಯವಸ್ಥಾಪಕ ಬಾಗವಾನ್, ಕನಕುಂಬಿ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಗಾವಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪ್ತಿ ದಿಲೀಪ್ ಗವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್ ಅಂಬರೆ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.















