ಬೆಂಗಳೂರು: ಗೋವು ಸಂಸ್ಕೃತಿ ಭಾರತೀಯ ಸೇವಾ ಸಂಸ್ಕಾರದ ಪ್ರತೀಕವಾಗಿದೆ. ಈ ಸಂಸ್ಕೃತಿಯನ್ನು ಮುಂದುವರಿಸಲು ರಾಷ್ಟ್ರಾದ್ಯಂತ ಅಭಿಯಾನವನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಶಾಸಕ ಕೆ ಗೋಪಾಲಯ್ಯ ತಿಳಿಸಿದರು.
ಭಾನುವಾರ ಮಹಾಲಕ್ಷ್ಮಿಪುರದ ಸಾದರ ಸಮುದಾಯ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಗೋ ಸಮ್ಮಾನ ಅಭಿಯಾನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ್ಯಂತ ಮಠಮಾನ್ಯಗಳ ಸ್ವಾಮೀಜಿಗಳನ್ನು ಒಂದಡೆ ಸೇರಿಸಿರುವುದು ಡಾ ಆರೂಢಭಾರತಿ ಸ್ವಾಮೀಜಿ ಅವರ ಹೆಗ್ಗಳಿಕೆ ಆಗಿದೆ. ಗೋವುಗಳ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಒಲವಿರುವ ಕುಟುಂಬಗಳು ಸಹ ಇಲ್ಲಿ ಸೇರಿರುವುದು ಸಂತಸವನ್ನು ಉಂಟು ಮಾಡಿದೆ ಎಂದರು.
ಗೋವುಗಳ ಸಂರಕ್ಷಣೆ ಎನ್ನುವುದು ದೈವ ಕಾರ್ಯವಾಗಿದೆ. ಅವುಗಳನ್ನು ನಂಬಿ ಪೂಜಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲವೂ ಕೈಗೂಡುತ್ತದೆ. ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಪ್ರತಿ ಕುಟುಂಬವೂ ಗೋವುಗಳನ್ನು ಸಾಕಿ ಸಲುಹಿದರೆ ಅವರ ಶ್ರೇಯೋಭಿವೃದ್ಧಿ ಇನ್ನಷ್ಟು ಆಗುತ್ತದೆ. ಪ್ರತಿ ದಿನ ಗೋದಿ ರೊಟ್ಟಿಯನ್ನು ನನ್ನ ಮನೆಯಲ್ಲಿ ಸಾಕಿರುವ ಗೋವುಗಳಿಗೆ ತಿನ್ನಿಸಿ ಇತರ ಕೆಲಸ ಕಾರ್ಯಕ್ಕೆ, ಕಾರ್ಯಕ್ರಮಗಳಿಗೆ ಹೊರಡುವುದು ನನ್ನದೇ ಪರಿಪಾಠವಾಗಿದೆ ಎಂದು ಹೇಳಿದರು.
ದೇಶಾದ್ಯಂತ ನಾಲ್ಕು ಹಂತಗಳಲ್ಲಿ ನಡೆಯುವ ಗೋಸಮ್ಮಾನ ಅಭಿಯಾನಕ್ಕೆ ಪೂರ್ವಭಾವಿಯಾಗಿ ಇಂದು ರಾಜ್ಯಮಟ್ಟದ ಪ್ರಚಾರಕರ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ಕಾರ್ಯಾಗಾರದಲ್ಲಿ ರಾಜ್ಯ ಹೊರರಾಜ್ಯದ ಅನೇಕ ಸಂತರು ರಾಜ್ಯದ ಪ್ರತಿ ತಾಲ್ಲೂಕಿನ ಪ್ರಾತಿನಿಧಿಕ ಗೋ ಭಕ್ತರು ಗೋಸಂರಕ್ಷಕರು ಭಾಗವಸಿರುವುದು ಸಂತಸ ತಂದಿದೆ. ಗೋವು ರಾಷ್ಟ್ರಮಾತೆ ಎಂದು ಉದ್ಘೋಷಿಸಬೇಕು, ದೇಶಾದ್ಯಂತ ಏಕಕಾನೂನಿನಡಿ ಗೋ ಹತ್ಯೆಯನ್ನು ನಿಷೇಧಿಸಬೇಕು, ಗೋಮಾಳವನ್ನು ಗೋವಿಗಾಗಿಯೇ ಉಳಿಸಬೇಕು, ಎಂಬ ಮುಖ್ಯ ಬೇಡಿಕೆಗಳ ಕುರಿತು ಈ ಸಭೆಯಲ್ಲಿ ವಿಸ್ತೃತ ಚರ್ಚೆ ನೆಡೆಯುತ್ತದೆ ಎಂದರು.
ಈ ಅಭಿಯಾನದ ಮುಂದಿನ ಭಾಗವಾಗಿ ಮೊದಲ ಹಂತದಲ್ಲಿ ಎಪ್ರಿಲ್ 27 ರಂದು ದೇಶದ ಎಲ್ಲ 5400 ತಹಶೀಲ್ದಾರ್ ರಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು. ಎರಡನೇ ಹಂತದಲ್ಲಿ ಜುಲೈ 27 ರಂದು ದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ, ಮೂರನೇ ಹಂತದಲ್ಲಿ ಅಕ್ಟೋಬರ್ 27 ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ನಾಲ್ಕನೇ ಹಂತದಲ್ಲಿ 2027 ರ ಫೆಬ್ರವರಿ 27 ರಿಂದ ಆಗಸ್ಟ್ 15 ರ ವರೆಗೆ ದೆಹಲಿಯಲ್ಲಿ ಅಪಾರ ಸಂಖ್ಯೆಯ ಸಂತರು ಹಾಗೂ ಗೋ ಭಕ್ತರು ಶಾಂತಿಯುತ ಧರಣಿ ನಡೆಸಲಿದ್ದಾರೆ. ಆಗಲೂ ಬೇಡಿಕೆ ಈಡೇರದಿದ್ದಲ್ಲಿ ಅಂತಿಮವಾಗಿ 2027 ರ ಆಗಸ್ಟ್ 16 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ನೆರೆದಿದ್ದ ಸಭಿಕರಿಗೆ ತಿಳಿಸಿದರು.
ಶ್ರೀ ಷ. ಬ್ರ. ಮುಮ್ಮಡಿ ಷಡಕ್ಷರಿ ಸ್ವಾಮೀಜಿ, ಸಿದ್ದಾರೂಢ ಮಠದ ಶ್ರೀ ಪ್ರಭುಲಿಂಗ ದೇವರು ಸ್ವಾಮೀಜಿ, ಮಾಜಿ ಶಾಸಕ ನೆಲ ನರೇಂದ್ರಬಾಬು ಸೇರಿದಂತೆ ಹಲವು ಸಾಧು ಸಂತರು ಗೋ ಸಂರಕ್ಷಣಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














