ಬೆಂಗಳೂರು: ಆನ್ ಲೈನ್ ನಲ್ಲಿ ಜೂಜು ಆಡಿ ಮಾಡಿಕೊಂಡಿದ್ದ 60 ಲಕ್ಷ ರೂಪಾಯಿ ಸಾಲ ತೀರಿಸಲು ಬ್ಯಾಂಕ್ ಲಾಕರ್ ನಲ್ಲಿದ್ದ 4 ಕೋಟಿ ಮೌಲ್ಯದ 2.753 ಕೆ.ಜಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಅಸ್ಟಿಸೆಂಟ್ ಬ್ರ್ಯಾಂಚ್ ಮ್ಯಾನೇಜರ್ ಒಬ್ಬನನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಕಿರಣ್ ಕುಮಾರ್ (33) ಬಂಧಿತ ಆರೋಪಿಯಾಗಿದ್ದಾರೆ. ಈತನಿಂದ ಒಂದು ಕಾಲು ಕೆ.ಜಿ. ಬಂಗಾರ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದ್ಯಾರಣಪುರದ ನಿವಾಸಿಯಾಗಿರುವ ಆರೋಪಿಯು ಮೂಲತಃ ಆಂಧ್ರಪ್ರದೇಶದವನಾಗಿದ್ದಾನೆ. 2016ರಿಂದ ರಾಜ್ಯದ ಬ್ಯಾಂಕ್ ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಿದ್ದ. 2025 ರ ಜೂನ್ ನಿಂದ ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತೋಯಜಾಕ್ಷಿ ಎಂಬುವವರು ಆರು ತಿಂಗಳ ಹಿಂದೆ ಬ್ಯಾಂಕ್ ನಲ್ಲಿ ಚಿನ್ನ ಅಡ್ಡವಿಟ್ಟು ಸಾಲ ಪಡೆದಿದ್ದರು. ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳಲು ಇತ್ತೀಚೆಗೆ ಬ್ಯಾಂಕ್ ಗೆ ಬಂದಿದ್ದರು. ಪೂರ್ಣ ಸಾಲ ಪಾವತಿಸಿ ಪ್ಯಾಕೆಟ್ ನಲ್ಲಿದ್ದ ಚಿನ್ನ ಪರಿಶೀಲಿಸಿದಾಗ ಕೆಲ ಅಭರಣ ಕಾಣೆಯಾಗಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಆತಂಕಗೊಂಡ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಗೋಲ್ಡ್ ಲೋನ್ ಮಂಜೂರು ಮಾಡಲಾಗಿದ್ದ 21 ಪ್ಯಾಕೇಟ್ ಗಳಲ್ಲಿ ಪ್ರಾಯಶಃ ಚಿನ್ನ ಕಾಣೆಯಾಗಿದ್ದರೆ 3 ಪ್ಯಾಕೆಟ್ ಗಳಲ್ಲಿ ಚಿನ್ನ ನಾಪತ್ತೆಯಾಗಿತ್ತು. ಒಟ್ಟು 2.783 ಕೆ.ಜಿ. ಚಿನ್ನ ಕಳವಾಗಿರುವುದು ಗೊತ್ತಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪರಿಶೀಲಿಸಿದಾಗ ಆರೋಪಿ ಕಿರಣ್, ಬ್ಯಾಂಕ್ ನ ವಲಯದ ಕಚೇರಿಗೆ ಹಾಜರಾಗಿ ಕಳ್ಳತನವೆಸಗಿರುವುದು ಒಪ್ಪಿಕೊಂಡಿದ್ದ. ಚಿನ್ನವನ್ನ ಕತ್ರಿಗುಪ್ಪೆಯ ಮಣಪುರಂ ಹಾಗೂ ಎಂ.ಎಸ್.ಪಾಳ್ಯದ ಮುತ್ತೂಟ್ಟು ಪೈನಾನ್ಸ್ ನಲ್ಲಿ ಅಡವಿಟ್ಟಿರುವುದಾಗಿ ಬಾಯ್ಬಿಟ್ಟಿದ್ದ. ಈ ಕುರಿತು ಬಂದ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
60 ಲಕ್ಷ ಸಾಲ ತೀರಿಸಲು ಚಿನ್ನ ಕಳವು:
ಆನ್ ಲೈನ್ ಜೂಜು ಹಾಗೂ ಬೆಟ್ಟಿಂಗ್ ವ್ಯಾಮೋಹಕ್ಕೆ ಅಂಟಿಕೊಂಡಿದ್ದ ಕಿರಣ್, ಹಲವು ವರ್ಷಗಳಿಂದ ಆನ್ ಲೈನ್ ನಲ್ಲಿ ಜೂಜಾಡುತ್ತಿದ್ದ. ಸುಮಾರು 60 ಲಕ್ಷದವರೆಗೆ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡಿದ್ದ. ಮಾಡಿಕೊಂಡ ಸಾಲದಿಂದ ಹೊರಬರಲು ಆರು ತಿಂಗಳಲ್ಲಿ ಹಂತ-ಹಂತವಾಗಿ 4 ಕೋಟಿ ಮೌಲ್ಯದ ಚಿನ್ನ ಕದ್ದು ಅಡವಿದ್ದು ಬಂದ ಹಣದಿಂದ ಕೊಂಚ ಸಾಲ ತೀರಿಸಿದ್ದ. ಸದ್ಯ ಒಂದು ಕಾಲು ಕೆ.ಜಿ. ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದಿದ್ದಾರೆ.
ಡಿಸಿಪಿ ಹೇಳಿದ್ದೇನು?
ಬ್ಯಾಂಕ್ ನಲ್ಲಿ 4 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ದೂರಿನ ಮೇರೆಗೆ ಬ್ಯಾಂಕ್ ನೌಕರನನ್ನು ಬಂಧಿಸಲಾಗಿದೆ. ಕದ್ದ ಹಣದಲ್ಲಿ ಆನ್ ಲೈನ್ ನಲ್ಲಿ ಬೆಟ್ಟಿಂಗ್ ಆಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಬ್ಯಾಂಕ್ ಲಾಕರ್ ನಲ್ಲಿ ಸಾರ್ವಜನಿಕರು ಚಿನ್ನವಿಟ್ಟರೆ ನಿಯಮಿತವಾಗಿ ಆಗಾಗ ಬ್ಯಾಂಕ್ ಭೇಟಿ ನೀಡಿ ಖಾತ್ರಿಪಡಿಸಿಕೊಳ್ಳಬೇಕು ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮನವಿ ಮಾಡಿದ್ದಾರೆ.














